ತುಳು ರಂಗಭೂಮಿ, ತುಳು ಸಿನೆಮಾ ಮತ್ತು ಕನ್ನಡ ಸಿನೆಮಾದಲ್ಲಿ ಇವರು ಹಿರಿಯ ಕಲಾವಿದೆ. == ಬಾಲ್ಯ == ಇವರ ಹುಟ್ಟು ಹೆಸರು ಶರ್ವಾಣಿ. ಕೆ. ಎನ್ ಟೇಲರ್ ಸರೋಜ ಎಂಬುದಾಗಿ ಇಟ್ಟ ಹೆಸರು ಮತ್ತೆ ಸರೋಜಿನಿ ಎಂಬುದಾಗಿ ಆಯಿತು. ತಂದೆಯನ್ನು ಸಣ್ಣ ವಯಸ್ಸಿನಲ್ಲೇ ಕಳೆದುಕೊಂಡ ಇವರಿಗೆ ತಾಯಿಯ ಪ್ರೋತ್ಸಾಹ ತುಂಬಾ ಇತ್ತು. ಶಾಲೆಯಲ್ಲಿರುವಾಗಲೇ ನಾಟಕದ ಬಗೆಯಲ್ಲಿ ಆಸಕ್ತಿ ಇದ್ದ ಇವರು, ತನ್ನ ೧೧ನೇ ವರ್ಷದಲ್ಲಿ ಮಲ್ಲಿಮದ್ಮೆ ಎನ್ನುವ ನಾಟಕದಲ್ಲಿ ಹುಡುಗನ ವೇಷ ಹಾಕಿದ್ದರು. ಶಾಲೆಯ ಸಮಾರಂಭಗಳಲ್ಲಿ ನಡೆಯುವ ನಾಟಕಗಳಲ್ಲಿ ಅವರು ಪಾಲು ಪಡೆಯುತ್ತಿದ್ದರು. ಅವರಿಗೆ ಈ ವಿಷಯದಲ್ಲಿ ಅವರ ಶಿಕ್ಷಕರ ಪ್ರೊತ್ಸಾಹ ತುಂಬಾ ಇತ್ತು. ಕೆನರಾ ಕಾಲೇಜಿನಲ್ಲಿ ಅವರು ಪಿ ಯು ಸಿ ಶಿಕ್ಷಣ ಪಡೆದರು. == ಚಿತ್ರರಂಗ == ೧೯೭೪ನೇ ಇಸವಿಯಲ್ಲಿ ಸಿನಿರಂಗ ಪ್ರವೇಶ ಮಾಡಿದ ಇವರು, ತುಳು ಮತ್ತು ಕನ್ನಡ ಸಿನಿಮಾಗಳಲ್ಲಿ ತುಂಬಾ ಪಾತ್ರಗಳನ್ನು ಮಾಡಿದ್ದರು. ರಮಾನಂದ ಸಾಗರ್ ನಿರ್ದೇಶನದ ಹಿಂದಿ ಮತ್ತು ಆಡೂರು ಗೋಪಾಲ ಕೃಷ್ಣ ನಿರ್ದೇಶನದ ಮಲೆಯಾಳಂ ಚಿತ್ರಗಳಲ್ಲಿ ಸಣ್ಣ ಪಾತ್ರ ಮಾಡಿದ್ದರು. === ತುಳು ಚಿತ್ರರಂಗದ ಸಂಬಂಧ === ಕೆ. ಎನ್.ಟೇಲರ್ ನ ತುಳುನಾಡ್ ಸಿರಿಯಲ್ಲಿ ಮುಖ್ಯಪಾತ್ರವಾದ ಸಿರಿಗೆ ಜೀವ ತುಂಬಿದರು. ಸರೋಜಿನಿ ಶೆಟ್ಟಿಯವರ ನಟನೆ, ವಾಣಿಜಯರಾಂ ಹೇಳಿದ ತುಳುನಾಡ್ ತುಡರ್ ಎಂಬ ತುಳು ಹಾಡು ಬಹಳ ಪ್ರಸಿದ್ಧವಾದುದು. ೧೯೭೮ ರ ಸಂಗಮ ಸಾಕ್ಷಿ, ಬೆಳ್ಳಿ ದೋಟ, ಕಡಲ ಮಗೆ, ಬಂಗಾರ್ ಪಟ್ಲೇರ್, ಬದಿ, ಚಂಡಿಕೋರಿ, ತೆಲಿಕೆದ ಬೊಳ್ಳಿ, ಬಯ್ಯ ಮಲ್ಲಿಗೆ, ಏರೆಗ್ ಆವುಯೆ ಕಿರಿಕಿರಿ - ಇದು ಅವರು ನಟಿಸಿದ ಕೆಲವು ಸಿನೆಮಾಗಳು. === ಕನ್ನಡ ಚಿತ್ರರಂಗದ ಸಂಬಂಧ === ಪೇಪರಿನಲ್ಲಿ ಬಂದ ಒಂದು ಜಾಹೀರಾತನ್ನು ನೋಡಿ, ಉಡುಪಿಯಲ್ಲಿ ಆಡಿಷನ್‌ಗೆ ಹೋಗಿ ರಾಷ್ಟ್ರೀಯ ಪ್ರಶಸ್ತಿ ಪಡೆದ ಚೋಮನ ದುಡಿ‌ ಸಿನೆಮಾದಲ್ಲಿ ಪಟೇಲರ ಹೆಂಡತಿಯಾಗಿ ಪಾತ್ರವನ್ನು ಗಿಟ್ಟಿಸಿಕೊಂಡರು. ಇದು ಶಿವರಾಮ ಕಾರಂತರ ಕಾದಂಬರಿ ಆಧಾರಿತ, ಬಿ.ವಿ. ಕಾರಂತರು ನಿರ್ದೇಶನ ಮಾಡಿದ ಸಿನೆಮಾ. ಇದು ಮಾತ್ರ ಅಲ್ಲದೇ ಶಿವಶಂಕರ, ಕೃಷ್ಣ ನೀ ಬೇಗನೆ ಬಾರೊ, ಶುಭ ಮಂಗಳ, ಮಾಗಿಯ ಕನಸು, ಅರ್ಜುನ - ಹೀಗೆ ಸುಮಾರು ಕನ್ನಡ ಚಿತ್ರಗಳಲ್ಲಿ ಪಾತ್ರ ಮಾಡಿದ್ದಾರೆ. == ತುಳು ರಂಗಭೂಮಿಯ ಜೊತೆ ಒಡನಾಟ == ೧೯೮೮ ನೇ ಇಸವಿಯಲ್ಲಿ ತುಳು ರಂಗಭೂಮಿಗೆ ಪಾದಾರ್ಪಣೆ ಮಾಡಿದ ಇವರು ಪೌರಾಣಿಕ, ಸಾಮಾಜಿಕ ಮತ್ತು ಚಾರಿತ್ರಿಕ ನಾಟಕಗಳಲ್ಲಿ ಪಾತ್ರಗಳನ್ನು ಮಾಡಿದ್ದಾರೆ. === ಸಾಮಾಜಿಕ ನಾಟಕ === ಕೆ. ಎನ್ ಟೇಲರ್ ಅವರ ಗಣೇಶ ನಾಟಕ ಸಭಾದ ಕಂಡನಿ ಬೊಡೆದಿ ನಾಟಕದಲ್ಲಿ ಪಾತ್ರ ನಿರ್ವಹಿಸಿದ ಇವರು, ೧೯೮೮ರಲ್ಲಿ ಈ ನಾಟಕ ಆಡಲು ಅಭುದಾಬಿಗೆ ಕೂಡ ಹೋಗಿದ್ದರು, ನಾಟಕ ಆಡಲು ಕೊಲ್ಲಿ ರಾಷ್ಟಕ್ಕೆ ಹೋದ ಮೊದಲ ತಂಡ ಇದು ಎಂಬ ಹೆಗ್ಗಳಿಕೆಗೆ ಪಾತ್ರ ಆಗಿದೆ. ವಿಜಯ ಕುಮಾರ್ ಶೆಟ್ಟಿ ಕೆಮ್ಮಣ್ಣು ಇವರ ಒರಿಯೆ ಮಗೆ ಒರಿಯೆ ಬಾರೀ ಪ್ರಸಿದ್ಧವಾದ ನಾಟಕ. ಇದರಲ್ಲಿ ಅವರು ಮೇಘಮಾಲ ಎನ್ನುವ ಪಾತ್ರ ಮಾಡಿದ್ದಾರೆ. ಕೃಷ್ಣ ಕೋಪೂರ್ ನಾಟಕದ ಬಾಲೆಮಾಣಿ ಪಾತ್ರಕ್ಕೆ, ಡಾ. ಮೋಹನ್ ಆಳ್ವ ಇವರು ನಡೆಸಿದ ನಾಟಕ ಸ್ಪರ್ಧೆಯಲ್ಲಿ ಶ್ರೇಷ್ಠ ನಟಿ ಪ್ರಶಸ್ತಿ ಕೂಡಾ ಸಿಕ್ಕಿದೆ. ದೇವಿದಾಸ್ ಕಾಫಿಕಾಡ್ ಅವರ ಗಂಟೆತ್ತಾಂಡ್ ಎನ್ನುವ ನಾಟಕದಲ್ಲಿ ಮಲ್ಲಿ ಎನ್ನುವ ಒಂದು ವಿಭಿನ್ನ ಪಾತ್ರ ಮಾಡಿದ್ಧಾರೆ. ಈ ನಾಟಕ ಬಹರಿನ್‌ನಲ್ಲಿಯೂ ಪ್ರದರ್ಶನ ಕಂಡಿದೆ. === ಚಾರಿತ್ರಿಕ ನಾಟಕ === ಚಾರಿತ್ರಿಕ ನಾಟಕಗಳಾದ ವೀರರಾಣಿ ಅಬ್ಬಕ್ಕ, ಝಾನ್ಸಿ ರಾಣಿ ಲಕ್ಷ್ಮಿಬಾಯಿ, ಕಿತ್ತೂರು ರಾಣಿ ಚೆನ್ನಮ್ಮ ಮತ್ತು ಬೆಳವಾಡಿ ಮಲ್ಲಮ್ಮ ಈ ರೀತಿಯ ನಾಟಕಗಳಲ್ಲಿ ಪಾತ್ರ ಮಾಡಿದ್ದಾರೆ. === ಪೌರಾಣಿಕ ನಾಟಕ === ಕೆಲವು ಪೌರಾಣಿಕ ನಾಟಕಗಳಲ್ಲಿ ಪಾತ್ರ ಮಾಡಿದ ಇವರು ಇತ್ತೀಚೆಗೆ ಮಾಡಿದ ಕಟೀಲ್ದಪ್ಪೆ ಉಳ್ಳಾಲ್ತಿ‌ಯಲ್ಲಿ ಶ್ರೀದೇವಿಯ ಪಾತ್ರ ತುಂಬಾ ಹೆಸರು ಮಾಡಿದೆ.. == ಉಲ್ಲೇಖ ==